ಪರಿಚಯ

ಕಗಪ - ಕನ್ನಡ ಗಣಕ ಪರಿಷತ್ತು ಸಂಸ್ಥೆಯು ಹೊಸ ಯೋಜನೆ, ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ 2014ರ www.biffes.in ಅಂತರಜಾಲ ತಾಣದ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಮಾಡಿದೆ.

ಕನ್ನಡವನ್ನು ಗಣಕಗಳಲ್ಲಿ ಬಳಸುವುದರಲ್ಲಿ ಆಸಕ್ತಿ ಹೊಂದಿರುವ ಆಸಕ್ತರ ಗುಂಪಿನಿಂದ 1997 ರಲ್ಲಿ  ಕನ್ನಡ ಗಣಕ ಪರಿಷತ್ತು ಒಂದು ಸ್ವಯಂಸೇವಾ ಸಂಸ್ಥೆಯಾಗಿ ರೂಪುಗೊಂಡಿತು. ಸಂಸ್ಥೆಯು ವಿವಿಧ ಸಂಗತಿಗಳ ಗಣಕೀಕರಣದ ಸಂದರ್ಭದಲ್ಲಿ ಕನ್ನಡವನ್ನು ಬಳಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಸಿದ್ಧಪಡಿಸಿದೆ; ಅವುಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದೆ. ತುಂಬ ಮುಖ್ಯವಾಗಿ ಕರ್ನಾಟಕ ಸರ್ಕಾರದ ಆಡಳಿತದ ಗಣಕೀಕರಣದ ಸಂದರ್ಭದಲ್ಲೂ ಕನ್ನಡ ಭಾಷೆಯೇ ಮಾಧ್ಯಮವಾಗಿ ಮುಂದುವರೆಯಬೇಕೆಂದು ಪ್ರತಿಪಾದಿಸಿದೆ. ಈ ದಿಸೆಯಲ್ಲಿ ಒಂದು ಕನ್ನಡ ತಂತ್ರಾಂಶವು (ಸಾಫ಼್ಟ್ ವೇರ್) ನೀಡಬೇಕಾದ ಕನಿಷ್ಠ ಸೌಲಭ್ಯಗಳನ್ನು ಗುರುತಿಸಿ ಅದನ್ನು ಪ್ರಚುರಪಡಿಸಿ ಆ ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿದೆ. ಕನ್ನಡ ಗಣಕ ಪರಿಷತ್ತು ಗಣಕ ಮತ್ತು ಕನ್ನಡಗಳಿಗೆ ಸಂಬಂಧಿಸಿದಂತೆ ಕೆಲವು ಧ್ಯೇಯೋದ್ದೇಶಗಳನ್ನಿರಿಸಿಕೊಂಡಿದೆ. ಅವುಗಳನ್ನು ಈಡೇರಿಸಿಕೊಳ್ಳುವ ದಿಸೆಯಲ್ಲಿ ಕಾರ್ಯನಿರತವಾಗಿದೆ.

 ಆ ಪೈಕಿ ಮುಖ್ಯವಾದ ಕೆಲವು ಅಂಶಗಳನ್ನು ಈ ಮುಂದೆ ಕಾಣಿಸಿದೆ.

1. ಗಣಕಗಳಲ್ಲಿ ಕನ್ನಡ ಲಿಪಿಯನ್ನು ನೀಡುತ್ತಿರುವ ಲಿಪಿತಂತ್ರಾಂಶಗಳಲ್ಲಿ ಬಳಸುವ ಅಕ್ಷರಭಾಗಗಳು ಮತ್ತು ಅವುಗಳಿಗೆ ಬಳಸುವ ಸಂಕೇತಗಳಲ್ಲಿ ಶಿಷ್ಟತೆ ಮತ್ತು ಏಕರೂಪತೆ ರೂಪಿಸುವುದು.

2. ಕೀಲಿಮಣೆಯ ವಿನ್ಯಾಸದಲ್ಲಿ ಏಕರೂಪತೆ ರೂಪಿಸುವುದು.

3. ಗಣಕಗಳಲ್ಲಿ ಕನ್ನಡವನ್ನು ಬಳಸಲು ಮೇಲಣ ಶಿಷ್ಟತೆ ಮತ್ತು ಏಕರೂಪತೆಗಳಿರುವ ಒಂದು ತಂತ್ರಾಂಶ ಸಿದ್ಧಪಡಿಸುವುದು.

4. ವಿಂಡೋಸ್, ಲಿನಕ್ಸ್ ಮುಂತಾದ ವಿವಿಧ ಕಾರ್ಯಚರಣ ವ್ಯವಸ್ಥೆಗಳಲ್ಲಿ ಕನ್ನಡದ ಬಳಕೆಯು ಸುಲಲಿತವಾಗಿರುವಂತೆ ಸೂಕ್ತ ತಂತ್ರಾಂಶಗಳನ್ನು ಸಿದ್ಧಪಡಿಸುವುದು.

5. ಹಲವು ಮಾದರಿ ಆನ್ವಯಿಕ ತಂತ್ರಾಂಶಗಳ ತಯಾರಿಕೆ.

6. ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳ ಬಹುಮಾಧ್ಯಮ ತಂತ್ರಾಂಶಗಳ ತಯಾರಿಕೆ.

7. ಗಣಕ ಶಿಕ್ಷಣಕ್ಕಾಗಿ ಕನ್ನಡದಲ್ಲಿ ಪಠ್ಯಪುಸ್ತಕಗಳ ರಚನೆ.

8. ಗಣಕ-ಕನ್ನಡ ಕುರಿತಂತೆ ಜಾಗೃತಿ ಕಾರ್ಯಕ್ರಮಗಳು.

ಕರ್ನಾಟಕ ಸರ್ಕಾರವು ತಾನು ನಿಗದಿಪಡಿಸಿದ ಶಿಷ್ಟತೆಗಳಿಗೆ ಅನುಗುಣವಾದ ಒಂದು ಮಾನಕ ಲಿಪಿ ತಂತ್ರಾಂಶವನ್ನು ಸಿದ್ಧಪಡಿಸಲು ಕನ್ನಡ ಗಣಕ ಪರಿಷತ್ತಿಗೆ ತಿಳಿಸಿತು. ಈ ಕಾರ್ಯದಲ್ಲಿ ತೊಡಗಿದ ಕನ್ನಡ ಗಣಕ ಪರಿಷತ್ತು ‘ನುಡಿ’  ಎಂಬ ಕನ್ನಡ ಲಿಪಿ ತಂತ್ರಾಂಶವನ್ನು ರೂಪಿಸುವುದರಲ್ಲಿ ಯಶಸ್ವಿಯಾಗಿದೆ. ಕನ್ನಡ ತಂತ್ರಾಂಶಗಳಿಗೆ ನಿಗದಿಗೊಳಿಸಿರುವ ಶಿಷ್ಟತೆಗಳು ಮತ್ತು ಈ ಮಾನಕ ತಂತ್ರಾಂಶದ ಅಭಿವೃದ್ಧಿ ಅಭೂತರ್ವ ಸಾಧನೆಯಾಗಿದ್ದು ಇತರ ಭಾಷೆಗಳಿಗೆ ಮಾದರಿಯಾಗಿದೆ. ದಿನಾಂಕ 17.09.2001 ಮತ್ತು 18.09.2001ರಂದು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಕರ್ನಾಟಕ ಸರ್ಕಾರದ ಮತ್ತು ಕನ್ನಡ ಗಣಕ ಪರಿಷತ್ತಿನ ಈ ಸಾಧನೆಗಳಿಗೆ ಮೆಚ್ಚುಗೆಯನ್ನು ಸೂಚಿಸತು. ಇದರ ಪರಿಣಾಮವಾಗಿ ಕನ್ನಡದ ಮಾದರಿಯಂತೆ ಇತರ ಭಾರತೀಯ ಭಾಷೆಗಳಿಗೂ ಈ ರೀತಿಯ ಶಿಷ್ಟತೆಗಳನ್ನು ರೂಪಿಸುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಈ ಕಾರ್ಯದಲ್ಲಿ ಕನ್ನಡ ಗಣಕ ಪರಿಷತ್ತಿಗೆ ಕರ್ನಾಟಕ ಸರ್ಕಾರವೇ ಅಲ್ಲದೆ ನಾಡಿನ ಹಾಗೂ ಹೊರನಾಡಿನ ಕನ್ನಡಿಗರು ಮತ್ತು ಎಲ್ಲಾ ಕನ್ನಡಾಭಿಮಾನಿಗಳು ಸೂಕ್ತವಾದ ಪ್ರೋತ್ಸಾಹ, ಸಹಕಾರ ಹಾಗೂ ಬೆಂಬಲಗಳನ್ನು ನೀಡುವರೆಂದು ನಿರೀಕ್ಷಿಸಿದೆ. ಕನ್ನಡ ಗಣಕ ಪರಿಷತ್ತು ಒದಗಿಸುವ ಸೌಲಭ್ಯಗಳನ್ನು ಸಮಸ್ತ ಕನ್ನಡಿಗರೂ ಬಳಸಿಕೊಳ್ಳುವರೆಂದು ಕನ್ನಡ ಗಣಕ ಪರಿಷತ್ತು ಖಚಿತವಾಗಿ ನಂಬಿದೆ.